ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday 22 May 2012

ಪರಿಸ್ಥಿತಿ ಮತ್ತು ಮನಸ್ಥಿತಿ


ಅನೇಕಾನೇಕ ವಿಚಾರಗಳನ್ನು ಪರಿಸ್ಥಿತಿ ಮತ್ತು ಮನಸ್ಥಿತಿ ನಿರ್ಧರಿಸುತ್ತದೆ ಮತ್ತು ನಮಗರಿವಿಲ್ಲದಂತೆಯೇ ಆ ಪರಿಸ್ಥಿತಿಗೆ ನಮ್ಮ ಮನಸ್ಥಿತಿ ಒಗ್ಗಿಕೊಂಡುಬಿಡುತ್ತದೆ. ಉದಾಹರಣೆಗೆ: ಒಂದು ಕೇಜಿ ಅಕ್ಕಿ ತೆಗೆದುಕೊಳ್ಳುವಾಗ ತೂಕ ಹಾಕುವವನು 5 ಗ್ರಾಂ ಕಡಿಮೆ ಅಥವಾ ಹೆಚ್ಚು ತೂಗಿದರೆ ಅದು ದೊಡ್ಡ ವಿಚಾರವೇ ಅಲ್ಲ ಆದರೆ ಅದೇ ಅಂಗಡಿಯಲ್ಲಿ ಚಿನ್ನ ಮಾರುತ್ತಿದ್ದರೆ, ಕೊಳ್ಳುವಾಗ ಕೇವಲ ಒಂದು ಗ್ರಾಂ ಕಡಿಮೆಯಾದರೂ ಅದು ನಮಗೆ ಸಹಿಸಿಕೊಳ್ಳಲಾಗದ ವಿಚಾರ. ಅಂಗಡಿಯವನು ಆಗ ವಿಶ್ವಾಸಘಾತುಕನಾಗುತ್ತಾನೆ. ಜಗಳಕ್ಕೆ ನಿಂತು ಬಿಡುತ್ತೇವೆ. ಈ ಮಹಾನ್ ವ್ಯತ್ಯಾಸಕ್ಕೆ ಚಿನ್ನದ ನಗದುಬೆಲೆಗಿಂತ ಚಿನ್ನಕ್ಕೆ ನಾವು ಕೊಡುವ ಮನಸ್ಥಿತಿಯ ಬೆಲೆಯೇ ಕಾರಣವಾಗುತ್ತದೆ. ಚಿನ್ನಕ್ಕಿಂತ ಅನ್ನ ಮುಖ್ಯ ಎಂದೆನಿಸಿದರೂ ಇಂದಿನ ಪರಿಸ್ಥಿತಿಗೆ ಒಡವೆ ವಸ್ತುಗಳು ಅನಿವಾರ್ಯ ಉಪಕರಣಗಳಾಗುವಂತಹ ಸ್ಥಿತಿಯನ್ನು ಸಾಮೂಹಿಕವಾಗಿ ಮನುಷ್ಯ ಮಾಡಿದ್ದಾನೆ. ಆ ರೀತಿ ನೋಡಿದರೆ ಚಿನ್ನಕ್ಕಿಂತಲೂ ಹೊಳಪನ್ನು ಸೂಸುವ ನೀರನ್ನು ಸಣ್ಣ ಸಣ್ಣ ಕೊಟ್ಟೆಗಳಲ್ಲಿ ತುಂಬಿಕೊಂಡು ಕಿವಿಗೆ ನೇತುಕೊಂಡರೂ ಪ್ರತಿಫಲನದಲ್ಲಿ ಚಿನ್ನಕ್ಕಿಂತಲೂ ಹೆಚ್ಚು ಹೊಳೆಯುತ್ತದೆ. ಆದರೆ ಆ ವಿಚಾರದಲ್ಲಿ ನಮ್ಮ ಮನಸ್ಥಿತಿ ಬದಲಾಗುವುದಿಲ್ಲ. ಮುಂದೊಮ್ಮೆ ಹೊಟ್ಟೆಗೆ, ಬಟ್ಟೆಗೆ, ತಾವಿಗೆ ತೊಂದರೆಯಾದರೆ ಅದೇ ಚಿನ್ನವನ್ನು ಅಡವಿಡುತ್ತೇವೆ ಅಥವಾ ಮಾರಿಬಿಡುತ್ತೇವೆ. ಕರಗಿಸಿ ತಿನ್ನುವುದಿಲ್ಲ. ಆಗಲೂ ಪರಿಸ್ಥಿತಿಯೇ ಕಾರಣ.

ಒಂದೂರಿನಲ್ಲಿ ದನ'ಗಳನ್ನು ಮಾರುತ್ತಿದ್ದರಂತೆ. ಅಲ್ಲಿ ಬಿಳಿಬಣ್ಣದ ಹಸುಗಳಿಗೆ ಹೆಚ್ಚು ಬೆಲೆ ಮತ್ತು ಕಪ್ಪು ಬಣ್ಣದ ಹಸುಗಳಿಗೆ ಬೆಲೆ ಸ್ವಲ್ಪ ಕಡಿಮೆ. ಕೊಂಬು ನೆಟ್ಟಗಿದ್ದರೆ ಬೆಲೆ ಹೆಚ್ಚು ಸೊಟ್ಟಗಿದ್ದರೆ ಕಡಿಮೆ. ಗುಂಪು ಗುಂಪಾಗಿ ನಿಂತಿದ್ದ ಮಾರಲ್ಪಡುವ ದನಗಳು ನಾನು ಕಪ್ಪಗಿದ್ದೇನೆ, ಕೊಂಬು ಸೊಟ್ಟಗಿದೆ ಎಂದು ಅಳುತ್ತಿರಲಿಲ್ಲವಂತೆ. ಅವುಗಳ ಮನಸ್ಥಿತಿಗೆ ಲಕ್ಷ್ಮಣರೇಖೆಗಳಿಲ್ಲ. ಅಲ್ಲೂ ಕೂಡ ಮನುಷ್ಯನ ಮನಸ್ಥಿತಿಯೇ ಕಾರಣ. 9999 ರ ಮುಖಬೆಲೆಯ ಒಂದು ವಸ್ತುವಿಗೆ 10000 ರೂ ನೀಡಿದಾಗ ಬಾಕಿ ಒಂದು ರುಪಾಯಿಯನ್ನು ಕೇಳಲು ನಾಚಿಕೆಯಾಗುತ್ತದೆ ಆದರೆ 50 ಪೈಸೆ ಬೆಲೆಯ ಚಾಕೋಲೇಟ್ ಗೆ 1 ರೂ ಕೊಟ್ಟುಬಿಟ್ಟರೆ ಉಳಿದ 50 ಪೈಸೆಯನ್ನು ನಾವು ಬಿಡುವುದಿಲ್ಲ. ಇಲ್ಲಿನ ಹಣದ ಬೆಲೆ ಹೆಚ್ಚಾಗುವುದಿಲ್ಲ ಬದಲಾಗಿ ನಮ್ಮ ಮನಸ್ಥಿತಿಯಿಂದ ಪರಿಸ್ಥಿತಿ ವ್ಯತಿರಿಕ್ತವಾಗುತ್ತವೆ. ಹತ್ತು ಸಾವಿರದ ಮುಂದೆ 1 ರೂ ದೊಡ್ಡದಲ್ಲ ಆದರೆ 50 ಪೈಸೆ ಮುಂದೆ ಉಳಿದ 50 ಪೈಸೆ ದೊಡ್ಡದು ಎಂದು ನಾವು ಭಾವಿಸಲ್ಪಡುತ್ತೇವೆ. ಪರಿಸ್ಥಿತಿ ಮತ್ತು ಮನಸ್ತಿತಿ ಒಂದಕ್ಕೊಂದು ಬಂಧಿಸಿಕೊಳ್ಳುವುದು ಸಹಜ.

ಹಾಗಾದರೆ ಪ್ರತಿಯೊಂದಕ್ಕೂ ಪರಿಸ್ಥಿತಿಯೇ ಕಾರಣವೇ?? ಎಲ್ಲೋ ಒಂದು ಕಡೆ ಹೌದು ಎನ್ನಬಹುದು. ನಮ್ಮ ಮನಸ್ಥಿತಿಯನ್ನು ತೂಗುವುದು ಪರಿಸ್ಥಿತಿಯೆ. ಮುಂದುವರೆಯುತ್ತಾ ಆ ಮನಸ್ಥಿತಿ ಮತ್ತೊಂದಷ್ಟು ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಕಾಲಿಲ್ಲದ ಮನುಷ್ಯ ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡು ಸಂತಸದಿಂದಲೇ ಇರುತ್ತಾನೆ. ದುಡಿದುಣ್ಣಲು ಕಷ್ಟವಾಗಬಹುದೆಂಬ ಕೊರಗಿರಬಹುದು, ಆದರೆ ಕಾಲನ್ನು ನೋಡಿಕೊಂಡಾಗ ಅದು ಕತ್ತರಿಸಿ ಹೋಗಿರುವುದನ್ನು ಒಪ್ಪಿಕೊಂಡು ಅಲ್ಲಿ ಕಾಲಿಲ್ಲ ಎಂಬ ವಿಚಾರದಲ್ಲಿ ಸ್ಥಿತಪ್ರಜ್ಞನಾಗಿರುತ್ತಾನೆ. ಆದರೆ ಆತನನ್ನು ನೋಡಿದ ತಕ್ಷಣ ಎಷ್ಟೋ ಜನ ಕಾಲಿಲ್ಲ ಎಂದು ಮರುಗುತ್ತಾರೆ. ಈ ಪರಿಸ್ಥಿತಿಯಲ್ಲಿ ನಮ್ಮ ಮನಸ್ಥಿತಿ ಮತ್ತು ಆತನ ಮನಸ್ಥಿತಿ ವ್ಯತಿರಿಕ್ತವಾಗಿರುತ್ತದೆ. ಸತ್ಯವನ್ನೊಪ್ಪಿಕೊಂಡಾತ ನಮಗಿಂತ ಗಟ್ಟಿಯಿರುತ್ತಾನೆ. ಕನ್ನಡಿ ಮುಂದೆ ನಿಂತು ನಮ್ಮ ಮುಖವನ್ನು ಸರಿಯಾಗಿ ನೋಡಿಕೊಂಡಿದ್ದಾರೆ ಮತ್ತೊಬ್ಬರ ವ್ಯಂಗ್ಯಕ್ಕೆ ನಮ್ಮ ಮನಸ್ಸು ಅಷ್ಟು ಸುಲಭವಾಗಿ ಕುಗ್ಗಿಹೋಗುವುದಿಲ್ಲ. ಯಾರಾದರೂ ನಮ್ಮನ್ನು 'ಹಲ್ಲುಬ್ಬ ಅಥವಾ ಹಲ್ಲುಬ್ಬಿ' ಎಂದಾಗ ನಾವು ನಿಜಕ್ಕೂ ಹಲ್ಲುಬ್ಬ ಅಥವಾ ಹಲ್ಲುಬ್ಬಿಯಾಗಿದ್ದರೆ ಮನಸ್ಸು ದುಃಖಿತವಾಗುವುದಿಲ್ಲ. ಆ ರೀತಿ ಹೇಳಿದವರ ಮೇಲೆ ಕೋಪ ಬರಬಹುದಷ್ಟೆ. ಆದರೆ ನಮ್ಮ ಹಲ್ಲುಗಳು ಹೇಗಿವೆ ಎಂದು ನಮಗೆ ತಿಳಿದಿರದಿದ್ದರೆ, ಆ ಕ್ಷಣದಲ್ಲಿ ಮನಸ್ಸು ನೋವಿನ ಮೂಟೆಯಾಗುತ್ತದೆ ಮತ್ತು ಅವರು ಹೇಳಿದ್ದು ಹೌದೋ? ಇಲ್ಲವೋ? ಎಂಬ ಗೊಂದಲದಲ್ಲಿ ದಿನದೂಡುತ್ತೇವೆ. ನೆನಪಾದಾಗಲೆಲ್ಲ ನೋವು ಮತ್ತು ಭಯ ಕಾಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸತ್ಯವನ್ನೊಪ್ಪಿಕೊಳ್ಳುವುದರಲ್ಲಿ ಪರಿಸ್ಥಿತಿ ಮತ್ತು ಮನಸ್ಥಿತಿಯನ್ನ ನಿಯಂತ್ರಿಸಬಹುದು. ಸಚ್ಚಿದಾನಂದ ಎಂದರೆ ಸತ್ಯವನ್ನು ಒಪ್ಪಿಕೊಂಡ ಮನಸ್ಸು ಆನಂದವಾಗಿರುತ್ತದೆ ಎಂದರ್ಥ.

ಆದುದರಿಂದ ಪರಿಸ್ಥಿತಿ ಮತ್ತು ಮನಸ್ತಿತಿಯನ್ನು ನಿಯಂತ್ರಿಸುವ ಸಾಧನಗಳನ್ನು ಮೊದಲು ಗುರುತಿಸಿಕೊಳ್ಳಬೇಕು. ನೀವು ತಡವಾಗಿ ಕೆಲಸಕ್ಕೆ ಹಾಜಾರಾದಾಗ ಮೇಲಿನವರು ಬೈಯುವುದು ಸಹಜ. ಆಗ ಮುನಿಸಿಕೊಳ್ಳಬಾರದು ಮತ್ತು ಗೊಂದಲಕ್ಕೆ ಬೀಳಬಾರದು. ಇಂದಿನ ಬೈಗುಳಕ್ಕೆ ತಡವಾಗಿ ಬಂದದ್ದೇ ಕಾರಣ ಎಂಬ ಸತ್ಯವನ್ನು ಮೊದಲು ಅರಗಿಸಿಕೊಳ್ಳಬೇಕು. ಮರುಕಳಿಸದಂತೆ ಕಠಿಣ ಎಚ್ಚರಿಕೆ ವಹಿಸಬೇಕು. ಅಷ್ಟು ಪ್ರೀತಿಸಿದ ಹುಡುಗಿ ಮೋಸಮಾಡಿ ಹೋದಳಲ್ಲ ಎಂದು ಕೊರಗುವ ಬದಲು ಹೊರಟುಹೋದಳು, ಅಷ್ಟಕ್ಕೆ ಮಾತ್ರ ಸಾವು ಬಂದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು. ಆಕೆ ಮತ್ತೊಬ್ಬರನ್ನು ಮದುವೆ ಆಗಿರುವುದು ತಿಳಿದಾಗ ಮನಸ್ಸಿಗೆ ಇನ್ನಷ್ಟು ಸತ್ಯ ಅರಿವಾಯಿತು, ಅದು ಆಗಿಹೋಯಿತು ಆಗಲಿ ಎಂದು ಸತ್ಯವನ್ನು ಅರಗಿಸಿಕೊಂಡು ಮರೆತುಬಿಡಬೇಕು. ಯಾಕೆಂದರೆ ನಡೆಯಬೇಕಾದ ಎಷ್ಟೋ ವಿಚಾರಗಳು ನಮ್ಮನ್ನು ಕೇಳಿ ನಡೆಯಲ್ಪಡುವುದಿಲ್ಲ.

No comments:

Post a Comment