ಕಷ್ಟಪಟ್ಟ ಮರಹತ್ತಿ
ಮೂರು ಕಾಡಸಂಪಿಗೆ ಕೊಯ್ದು ತಂದೆ
ಒಂದು ಹೂವನ್ನೂ ಮುಡಿಯಲಿಲ್ಲ
ನಿಶೆಯಲ್ಲಿ ಹಾಗೆ ಕರಗಿಹೋದಳು
ಎಲ್ಲಿಂದಲೋ ಬಂದು ಸೃಷ್ಟಿಯ
ಕಣ್ಣರಳಿಸಿದಳು, ನೆಲವನ್ನು
ಗಟ್ಟಿಯಾಗಿ ಅಪ್ಪಿದಳು
ಏನೇ ಆದರೂ ರಾಶಿ ಇರುಳನ್ನು
ನುಂಗದ ತಿಳಿ ಹಣತೆಯಾದಳು
ಸುಟ್ಟುಹೋದ ಎದೆಗೆ
ಮಂಕುಕವಿದ ರಾತ್ರಿ ನೂರು
ವರ್ತಮಾನದಲ್ಲಿ ನಿದ್ದೆ
ಕೈ ಜಾರಿದ ಭವಿಷ್ಯದಾಸರೆ
ಒಬ್ಬಳಿಗಾಗಿ ಎಲ್ಲಾ ಕಳೆದುಕೊಂಡು ಒಬ್ಬಂಟಿಯಾದೆ
ಈಗಲೂ ಅಲ್ಲಿ ಇಲ್ಲಿ ಸಿಗುತ್ತಾಳೆ
ನನ್ನನ್ನು ನೋಡಿ ಸುಮ್ಮನೆ ನಗುತ್ತಾಳೆ
ಮುಟ್ಟಲು ಹೋದರೆ ಸುಟ್ಟುಬಿಡುತ್ತಾಳೆ
ನೆನಪುಗಳು ನಕ್ಷತ್ರಗಳಾಗಿ ಉದುರುತ್ತಿರುತ್ತವೆ
No comments:
Post a Comment