ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday 29 September 2011

ಪ್ರಯಾಣ....

ಪ್ರಯಾಣ....
(ಕಳೆದ ವಾರ ನನ್ನೂರು ಮೈಸೂರಿನಿಂದ ನಾನಿರುವ ಚಿಕ್ಕಮಗಳೂರಿಗೆ ಹೊರಡುವಾಗ ಬಸ್ಸಿನ ಮೂಲಕ ಕಂಡ ದೃಶ್ಯಗಳು)

ಹಾಗೆ ಬರುವಾಗ
ಮೊದಲು ಕಂಡಿತು ಅರಸ್ ಕಾರ್
... ಅದರೊಳಗೆ ಟಾಟಾ ಫೈನಾನ್ಸ್
ಸಾಲ ಕೊಟ್ಟು ವಸ್ತು ಕೊಡುವ ಸ್ಥಳ
ಮತ್ತೆ ಒಂದು ಮೈಲಿ ಸಾಗಿದರೆ
ಹಳೆ ಕಾರುಗಳ ಗುಜರಿ ಅಂಗಡಿ
ಅದರ ಪಕ್ಕದಲ್ಲೇ ಮಣಪ್ಪುರಂ ಗೋಲ್ಡ್
ಮನೆ ಚಿನ್ನಕ್ಕೆ ಮನೆ ಮಾರುವ ಸಾಲ
ಇನ್ನು ಮುಂದೆ ಸಾಗಿದರೆ ವೃದ್ಧಾಶ್ರಮ
ಸದ್ಯಕ್ಕೆ ಸೀಟುಗಳು ಖಾಲಿ ಇಲ್ಲ
ಅಲ್ಲಿಗೆ ಮುಗಿಯಿತು ಶ್ರೀಮಂತಿಕೆಯ ಆಟ

ಹತ್ತು ಮೈಲು ಮುಗಿದು ಸೂರ್ಯ ನೆತ್ತಿಗೆ ಬಂದ
ಹೊಲ ಉಳುತ್ತಿದ್ದ ರೈತರು ಕಂಡರು
ಪಕ್ಕದಲ್ಲೇ ಗದ್ದೆಗೆ ನೀರು ಬಿಟ್ಟ ಜನ
ಸ್ವಲ್ಪ ಮುಂದೆ ಬೀಜ ಎರಚಿ ಬಿತ್ತನೆ
ಕೊನೆಗೂ ಸಿಕ್ಕಿತು ಅರ್ಧಂಬರ್ಧ ಫಸಲು
ಇವರೆಲ್ಲ ಸೇರಿ ಒಂದು ವರ್ಷದ ಕೂಳು ಕಂಡರು
ಅಲ್ಲಿಗೆ ಮುಗಿಯಿತು ರೈತನ ಪಾಡು

ಹಳ್ಳಿಯೊಳಗೆ ಬಸ್ ನುಗ್ಗಿತು
ತೂರಾಡಿ ರೋಡಿಗೆ ಹಾರುವ ಜನ
ಎಲ್ಲೆಲ್ಲು ಇಟ್ಟುಕೊಂಡವರ
ಕಟ್ಟುಕೊಂಡವರ ಸುದ್ದಿ
ಎರಡು ಟೀ ಮೂರು ಬೀಡಿ
ಆಲದ ಅಡಿಯಲ್ಲಿ ಗೊರಕೆ ನಿದ್ದೆ
ಬೀದಿಯಲ್ಲಿ ಮೂರು ಗುಂಪು
ಮೂರು ಪಕ್ಷ, ಮೂರು ರಾಜಕೀಯ
ಪ್ರಪಂಚದ ತತ್ವ ಜ್ಞಾನಿಗಳಂತೆ ಇವರು
ಇಬ್ಬರು ಹೆಂಡಿರ ಮುದ್ದಿನ ಜನಗಳು
ಪಾಪ ಮಣ್ಣಿನ ಗೋಡೆಯ ನಡುವೆ
ರಾಗಿ ಬೀಸಿ ಕೂಳು ತೋರಿದ ಹೆಂಗಸರು
ಸಂಸಾರ ತೂಗಿ ಜಗದಲ್ಲಿ ಮೆರೆದರು
ಇಷ್ಟಕ್ಕೆ ಮುಗಿಯಿತು ಹಳ್ಳಿಯ ಜೀವನ

ಕೊನೆಗೂ ಸಿಕ್ಕಿತು ಕೆಲಸದ ಊರು
ಯಾಕೆ ತಡ ಎಂದು ನೂರು ಫೋನು
ಬಾಕಿ ಇದ್ದದ್ದು ಮೂರೇ ನಿಮಿಷ
ನಡೆಯಲಾಗಲಿಲ್ಲ, ಓಡಲು ಶುರು ಮಾಡಿದೆ
ಮತ್ತೆ ಪ್ರಾರಂಭವಾಯಿತು ನನ್ನ ಜೀವನ

No comments:

Post a Comment